ಅಂದು ಶಾಲೆಯಲ್ಲಿ ಸ್ವತಂತ್ರ ದಿನಾಚರಣೆಯ ಸಂಭ್ರಮ. ಧ್ವಜಾರೋಹಣಕ್ಕೆ ಆಗಮಿಸಿದ ರಾಜಕೀಯ ಗಣ್ಯರು. ಸಾವಿರಾರು ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ. ಇನೇನ್ನು ಧ್ವಜಾರೋಹಣ ಮಾಡಬೇಕು ಎನ್ನುವಷ್ಟರಲ್ಲಿ ಆ ಸ್ಥಳದಲ್ಲಿ ಉಗ್ರರು ದಾಳಿ ನಡೆಸುತ್ತಾರೆ. ನೆರೆದಿದ್ದ ಕೆಲವು ರಾಜಕೀಯ ವ್ಯಕ್ತಿಗಳು ಹಾಗೂ ಗಣ್ಯರನ್ನು ಹತ್ಯೆ ಮಾಡುತ್ತಾರೆ. ಅಲ್ಲಿಂದ ಕರೆ ಮಾಡಿದ ವ್ಯಕ್ತಿಯೊಬ್ಬರು ನ್ಯಾಷನಲ್ ಸೆಕ್ಯುರಿಟಿ ಗಾರ್ಡನ್ನು ಕಳುಹಿಸಿ ಕೊಡಿ ಎಂದು ಕೇಳಿಕೊಂಡಾಗ ಆದಿತ್ಯ ಹಾಗೂ ತಂಡದವರು ಹೆಲಿಕಾಫ಼್ಟರ್ ಮೂಲಕ ಬಂದು ಸಾವಿರಾರು ಮಕ್ಕಳ ಪ್ರಾಣ ಉಳಿಸುತ್ತಾರೆ. ಈ ಸನ್ನಿವೇಶವನ್ನು ‘ರೆಬಲ್ ಚಿತ್ರಕ್ಕಾಗಿ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ಬಾಬು ಅವರು ದೇವನಹಳ್ಳಿ ಬಳಿಯಿರುವ ಆಕಾಶ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಚಿತ್ರಿಸಿಕೊಂಡರು. ನಾಯಕ ಆದಿತ್ಯ ಹಾಗೂ ಸಹ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಮೈಸೂರು ಡ್ರೀಮ್ ಮರ್ಚೆಂಟ್ಸ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಸೆಲ್ವರಾಜ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜೆಸಿಗಿಫ಼್ಟ್ ಸಂಗೀತ ನೀಡಿದ್ದಾರೆ. ರವಿವರ್ಮ ಹಾಗೂ ಡಿಫ಼ರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನವಿರುವ ‘ರೆಬಲ್‘ಗೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ.